ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬರೆದಿದ್ದ ವ್ಯಕ್ತಿಯ ಬಂಧನವಾಗಿದೆ. ಹಲವು ದಿನಗಳಿಂದ ಆರೋಪಿಯ ಬೆನ್ನು ಹತ್ತಿದ್ದ ಪೊಲೀಸರು ಕೊನೆಗೂ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆದರಿಕೆ ಪತ್ರದ ಹಿಂದೆ ಡೈರೆಕ್ಟರ್ ಒಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಮೇಶ್ ಕಿಟ್ಟಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸುದೀಪ್ ಅವರ ಆತ್ಮೀಯರಾಗಿದ್ದ ರಮೇಶ್ ಕಿಟ್ಟಿ, ಸುದೀಪ್ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದ್ದರು. ಸುದೀಪ್ ಮತ್ತು ರಮೇಶ್ ನಡುವಿನ ಹಣಕಾಸು ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಸುದೀಪ್ ಚಾರಿಟಬಲ್ ಟ್ರಸ್ಟ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಇನ್ವೆಸ್ಟ್ ಮಾಡಿದ್ದ ರಮೇಶ್ ಗೆ ಆನಂತರ ಸುದೀಪ್ ವಾಪಸ್ಸು ನೀಡಿಲ್ಲ ಎನ್ನುವ ಕಾರಣಕ್ಕೆ ಈ ರೀತಿಯಾಗಿ ಪತ್ರ ಬರೆದಿದ್ದಾರೆಂದು ಹೇಳಲಾಗುತ್ತಿದೆ.
ಹಣಕಾಸಿನ ವೈಷಮ್ಯವೇ ಬೆದರಿಕೆ ಪತ್ರಕ್ಕೆ ಕಾರಣವೆಂದು ಸ್ವತಃ ರಮೇಶ್ ಕಿಟ್ಟಿನೇ ಒಪ್ಪಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಅಲ್ಲದೇ, ಈ ಪ್ರಕರಣದ ಹಿಂದೆ ಇನ್ನೂ ಹಲವರು ಇದ್ದಾರೆಂದು ಶಂಕಿಸಲಾಗುತ್ತಿದೆ. ಬೆದರಿಕೆ ಪತ್ರದ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮೊನ್ನೆಯಷ್ಟೇ ಸುದೀಪ್ ಹೇಳಿದ್ದರು. ಸಿನಿಮಾ ರಂಗದವರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾನೂನು ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ ಎಂದೂ ಹೇಳಿಕೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಟ್ಟಿ ಬಂಧನವಾಗಿದೆ.