ಮೈಸೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಲಕರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿರುವುದನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಖಂಡಿಸಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಿದ್ದರಾಜು, ಶಾಲೆಯಲ್ಲಿ ಟಾಯ್ಲೆಟ್ ಸ್ವಚ್ಛತೆ ಮಾಡಲು ಸಿಬ್ಬಂದಿ ಇರುತ್ತಾರೆ. ಆದರೆ, ಮಕ್ಕಳಿಂದ ಮಾಡಿಸಿರುವುದು ಅಮಾನವೀಯ ಘಟನೆ. ಮಕ್ಕಳು ಶಾಲೆಗೆ ಹೋಗುವುದು ವಿದ್ಯಾಭ್ಯಾಸಕ್ಕೆ. ಶೌಚಾಲಯ ಸ್ವಚ್ಛತೆ ಮಾಡಲು ಅಲ್ಲ. ಹೀಗಾಗಿ ಮಕ್ಕಳಿಂದ ಈ ಕೆಲಸ ಮಾಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರತಾಪಸಿಂಹ ಅವರಿಂದ ಪಾಸ್ ಪಡೆದು ಮನೋರಂಜನ್ ಮತ್ತು ಆತನ ಸ್ನೇಹಿತರು ಸಂಸತ್ತಿನಲ್ಲಿ ಹೊಗೆ ಬಾಂಬ್ ಹಾಕಿ ಭದ್ರತಾ ಲೋಪಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮಾಧ್ಯಮ ವಕ್ತಾರ ರವಿಪ್ರಕಾಶ್.ಪಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ರಾಮಸ್ವಾಮಿ, ರೇವಣ್ಣ ಇದ್ದರು.