ಚಾಮರಾಜನಗರ:- ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದಿರುವುದು ಕಂಡುಬಂದ ಹಿನ್ನೆಲೆಯಲ್ಲಿ 39,56,468 ರೂ ಮೌಲ್ಯದ 5481 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಶನಿವಾರ ದಂದು ಸಂಜೆ 5.15 ಗಂಟೆ ಸಮಯದಲ್ಲಿ ಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಚಿಕ್ಕಬಳ್ಳಾಪುರದ ಬ್ಲೂ ಏಷಿಯನ್ ಬ್ರೆವರೇಜಸ್ ಲಿಮಿಟೆಡ್ ನಿಂದ ಸರಬರಾಜಾದ 630 ಪೆಟ್ಟಿಗೆಗಳಲ್ಲಿ 5 ಪೆಟ್ಟಿಗೆಗಳಲ್ಲಿ ಇನ್ನರ್ ಕಾರ್ಟನ್ ಬಾಕ್ಸ್ ನ ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇ ಇರುವುದು ಕಂಡುಬಂತು ಈ ಹಿನ್ನೆಲೆಯಲ್ಲಿ ಒಟ್ಟಾರೆ 5481 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಡಿಸ್ಟಿಲರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾರಿ ಮತ್ತು ತನಿಖೆ) ನಿರ್ದೆಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ಉಪ ಆಯುಕ್ತರಾದ ಆರ್. ನಾಗಶಯನ, ಅಬಕಾರಿ ಉಪ ಅಧೀಕ್ಷಕರಾದ ಎಂ.ಡಿ. ಮೋಹನ್ಕುಮಾರ್, ಅಬಕಾರಿ ನಿರೀಕ್ಷಕರಾದ ಮೀನಾ, ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕರಾದ ಬಸವರಾಜು, ಅಬಕಾರಿ ನಿರೀಕ್ಷಕರಾದ ಗುರುನಾಥಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಅಕ್ರಮ ಮದ್ಯ ಸಾಗಾಣೆ : ಮದ್ಯ, ವಾಹನ ವಶ

ಚಾಮರಾಜನಗರ ವಲಯದ ಬಿಸಲವಾಡಿ ಗ್ರಾಮ ವ್ಯಾಪ್ತಿ ರಸ್ತೆಗಾವಲು ನಡೆಸುತ್ತಿದ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 9 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಸಾಗಾಣೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಭಾನುವಾರ ರಾತ್ರಿ 9 ಗಂಟೆ ಸಮಯದಲ್ಲಿ ಈರೋಡ್ ಜಿಲ್ಲೆ ಸತ್ತಿ ತಾಲ್ಲೂಕಿನ ಕಾಮಯನಪುರದ ವೆಂಕಟರಾಜು ಎಂಬ ವ್ಯಕ್ತಿಯು ಟಾಟಾ ಏಸ್ ವಾಹನದಲ್ಲಿ 9 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಕಂಡುಬಂತು.
ಆರೋಪಿಯನ್ನು ದಸ್ತಗಿರಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಘೋರ ಮೊಕದ್ದಮೆಯನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 203512 ರೂ.ಗಳಾಗಿದೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಚಾಮರಾಜನಗರ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಕರಣ ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.