ಮೈಸೂರು: ಹೋರಾಟದ ವೇಳೆ ಜೈಲಿಗೆ ಹೋಗಲು ನನಗೆ ತುಂಬಾ ಆಸೆಯಿತ್ತು. ಪೊಲೀಸರು ನನ್ನನ್ನು ಬಂಧಿಸಿದರಾದರೂ ಆನಂತರ ಮನೆಗೆ ಹೋಗು ಅಂತ ಬಿಟ್ಟು ಕಳುಹಿಸಿದರು. ನನ್ನನ್ನು ಜೈಲಿಗೆ ಕಳಿಸಿ ಎಂದು ಕೇಳಿಕೊಂಡರೂ ವಾಪಸ್ ಕಳುಹಿಸಿದರು ಎಂದು ತಮ್ಮ ಹೋರಾಟದ ದಿನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಲುಕು ಹಾಕಿದರು.ರಾಮಕೃಷ್ಣ ನಗರದ ರಮಾಗೋವಿಂದ ಸಭಾ ಭವನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಮಾಜವಾದಿ ಪ.ಮಲ್ಲೇಶ್ ಅವರು ರಚಿಸಿರುವ ‘ಬುದ್ದ ನಾಗಾರ್ಜುನರ ಶೂನ್ಯಯಾನ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ಸವಿತಾ ಮಲ್ಲೇಶ್ ಒಳ್ಳೆಯ ಭಾಷಣಕಾರರಾಗಿ ರೂಪುಗೊಳ್ಳುತ್ತಿರುವುದು ಸಂತೋಷದ ವಿಚಾರ. ಮಲ್ಲೇಶ್ ಅವರ ಹಲವು ಗುಣಗಳು ಸವಿತಾರಲ್ಲಿಯೂ ಇವೆ. ಮಲ್ಲೇಶ್ ಅಪ್ಪಟ ಸಮಾಜವಾದಿ. ಅವರು ಹೆಚ್ಚಿನ ಸಮಯವನ್ನು ಹೋರಾಟಕ್ಕೆ ಮೀಸಲಿಟ್ಟರು. ಹಾಗಾಗಿ ಬರೆಯುವ ಸಾಮರ್ಥ್ಯ ಇದ್ದರೂ ಹೆಚ್ಚು ಬರೆಯಲು ಆಗಲಿಲ್ಲ.
ಅವರು ಮನಸ್ಸು ಮಾಡಿದ್ದರೆ ಹಲವಾರು ಕೃತಿಗಳನ್ನು ಬರೆಯಬಹುದಿತ್ತು. ಕಾಲೇಜು ದಿನಗಳಿಂದಲೂ ಮಲ್ಲೇಶ್ ಜೊತೆ ನನಗೆ ಹೆಚ್ಚಿನ ಒಡನಾಟವಿತ್ತು. ಎಂ.ಡಿ.ನಂಜುಂಡಸ್ವಾಮಿ ಹಾಗೂ ಪ.ಮಲ್ಲೇಶ್ ಅವರ ಸಹವಾಸದಿಂದ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಬಂತು. ಇಲ್ಲದಿದ್ದರೇ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ.
ರಾಜಕೀಯವಾಗಿಯೂ ನಮ್ಮಿಬ್ಬರದೂ ಆತ್ಮೀಯ ಸಂಬಂಧ. ನಾನು ತಪ್ಪು ಮಾಡಿದಾಗ ತಪ್ಪು ಮಾಡುತ್ತಿದ್ದೀಯಾ ಎಂದು ಹೇಳುವ ಎದೆಗಾರಿಕೆ ಪ ಮಲ್ಲೇಶ್ ಅವರಿಗಿತ್ತು. ಒಮ್ಮೆ ಊಟಕ್ಕೆ ಕರೆದು ಜಗಳವಾಡಿದ್ದರು. ಅದಾದ ಮರುದಿನವೇ ನನ್ನನ್ನು ಕರೆದು ಮಾತನಾಡಿಸಿದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಲ್ಲೇಶ್ ಸದಾ ಮುಂಚೂಣಿಯಲ್ಲಿರುತ್ತಿದ್ದರು.
ಮಲ್ಲೇಶ್ ಜೊತೆಗೂಡಿ ನಡೆಸಿದ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.
ಜೈಲಿಗೆ ಹೋಗಲು ಆಸೆಯಿತ್ತಾದರೂ ಹೋಗಲು ಬಿಡಲಿಲ್ಲ: ಸಿಎಂ ಸಿದ್ದು
