ಪಾಂಡವಪುರ : ಪಂಪ್ಸೆಟ್ನಿಂದ ನೀರು ಹಂಚಿಕೊಳ್ಳುವಲ್ಲಿ ಅತ್ತಿಗೆ ಮೈದುನನ ನಡುವೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
45 ವರ್ಷದ ಶಾಂತಮ್ಮ ಮತ್ತು 17 ವರ್ಷದ ಯಶ್ವಂತ್ ಕೊಲೆಯಾದ ದುರ್ದೈವಿಗಳು. ಕೊಲೆ ಮಾಡಿದ ಸತೀಶ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಘಟನೆ ವಿವರ: ಸತೀಶ ಮತ್ತು ಶಂಕರೇಗೌಡ ಗ್ರಾಮದ ಮಾಯೀಗೌಡರ ಮಕ್ಕಳು. ಇಬ್ಬರ ಜಮೀನು ಹೆಗ್ಗಡಹಳ್ಳಿ ಗ್ರಾಮದಲ್ಲಿ ಅಕ್ಕ ಪಕ್ಕದಲ್ಲಿದೆ. ಜಮೀನಿನಲ್ಲಿರುವ ಒಂದೇ ಒಂದು ಪಂಪ್ಸೆಟ್ನಿಂದ ನೀರು ಹಾಯಿಸಿಕೊಳ್ಳುವಲ್ಲಿ ಸತೀಶ ಮತ್ತು ತನ್ನ ಸ್ವಂತ ಅತ್ತಿಗೆ ಶಂಕರೇಗೌಡನ ಹೆಂಡತಿ ಶಾಂತಮ್ಮ ಜತೆ ಜಗಳ ಪ್ರಾರಂಭವಾಗಿ ಅದು ವಿಕೋಪಕ್ಕೆ ತಿರುಗಿ ಸತೀಶ್ ತನ್ನ ಕೈಯಲ್ಲಿದ್ದ ದೊಣ್ಣೆ ಮತ್ತು ಕುಡಲಿನಿಂದ ಅತ್ತಿಗೆಯನ್ನು ಪಂಪ್ಸೆಟ್ ಮನೆಯಲ್ಲಿಯೇ ಹತ್ಯೆ ಮಾಡಿದ್ದಾನೆ. ಈ ವೇಳೆ ತಾಯಿಯನ್ನು ಬಿಡಿಸಲು ಬಂದ ತನ್ನ ಸ್ವಂತ ಅಣ್ಣನ ಮಗ ಯಶ್ವಂತ್ ಮೇಲೂ ಸತೀಶ ಹಲ್ಲೆ ನಡೆಸಿ ಹತ್ಯೆ ಮಾಡಿ ನಂತರ ಮೇಲುಕೋಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಾಗಿದ್ದಾನೆ.
ಸ್ಥಳದಲ್ಲಿ ಪೊಲೀಸರು ಹಾಜರಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಮೂಡಿದೆ.