ಮೈಸೂರು: ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಪಿ ಮಹೇಶ ಚಂದ್ರಗುರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಇಂದು ಸಂಜೆ (ಆಗಸ್ಟ್ 17) 7.30ರ ಸುಮಾರಿಗೆ ವಿಜಯನಗರ ತಮ್ಮ ನಿವಾಸದಲ್ಲಿ ಹಠಾತ್ ಹೃದಯಾಘಾತವಾಗಿರುವುದಾಗಿ ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೊ. ಮಹೇಶ್ ಚಂದ್ರ ಗುರು ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾಂಗ್ರೀನ್ ಕಾರಣದಿಂದ ಕಾಲುನೋವಿನ ಸಮಸ್ಯೆ ಎದುರಿಸುತ್ತಿದ್ದ ಪ್ರೊ.ಮಹೇಶ್ ಚಂದ್ರ ಗುರು ಅವರಿಗೆ ಇಂದು ಸಂಜೆ 7.30 ರ ಸುಮಾರಿಗೆ ಹೃದಯಘಾತ ಸಂಭವಿಸಿ, ನಿಧನರಾಗಿರುವುದಾಗಿ ತಿಳಿದುಬಂದಿದೆ.
31 ಜನವರಿ 1957ರಲ್ಲಿ ಜನಿಸಿದ್ದ ಇವರು, 80ರ ದಶಕದಲ್ಲಿ ಹೈದರಾಬಾದ್ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹುದ್ದೆ ಆರಂಭಿಸಿದ್ದರು. ಆ ಬಳಿಕ ಮಂಗಳೂರು ವಿವಿಯಲ್ಲಿ ಜರ್ನಲಿಸಂ ಪ್ರಾಧ್ಯಾಪಕರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಮೈಸೂರು ವಿವಿಗೆ ವರ್ಗಾವಣೆಗೊಂಡು 2019ರಲ್ಲಿ ಸೇವೆಯಿಂದ ನಿವೃತ್ತರಾದರು. ಭಾರತದಲ್ಲಿ ಮೊದಲ ದಲಿತ-ಬೌದ್ಧ ಮಾಧ್ಯಮ ಅಧ್ಯಯನ ಪ್ರಾಧ್ಯಾಪಕರಾಗಿ ಕೂಡ ಗುರುತಿಸಿಕೊಂಡಿದ್ದರು.
ನಿವೃತ್ತಿಯ ಬಳಿಕ ಪ್ರಗತಿಪರ ಚಳವಳಿಗಳಲ್ಲಿ ಗಣನೀಯವಾಗಿ ಗುರುತಿಸಿಕೊಂಡಿದ್ದ ಪ್ರೊ .ಮಹೇಶ್ ಚಂದ್ರ ಗುರು ಅವರು ಎಡಪಂಥೀಯ ವಾದವನ್ನು ಪ್ರತಿಪಾದಿಸುತ್ತಿದ್ದರು. ನಾಡ ಹಬ್ಬ ದಸರಾ ವೇಳೆ ಮಹಿಷಾ ದಸರಾ ಆಚರಣೆಗೊಳ್ಳಲು ಇವರು ಪ್ರಮುಖ ಪಾತ್ರ ವಹಿಸಿದ್ದರು.
ಪ್ರೊ. ಮಹೇಶ ಚಂದ್ರಗುರು ಇನ್ನಿಲ್ಲ
