ಬೆಂಗಳೂರು: ಫೇಸ್ಬುಕ್’ನಲ್ಲಿ ಪರಿಚಯವಾದ ಯುವತಿಯ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ₹37 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
“ಯುವತಿಯೂ 2020ರಿಂದ ಇಲ್ಲಿಯವರೆಗೆ ಯಾವ ಯಾವ ಖಾತೆಗಳಿಗೆ ಹಣ ಜಮೆ ಮಾಡಿಕೊಂಡಿದ್ದಾಳೆ. ಹಣ ವರ್ಗಾವಣೆ ಮಾಡಿರುವ ದಾಖಲೆ ಸಮೇತ ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ವಂಚನೆ ನಡೆದಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಸ್ವಾಮೀಜಿ ಅವರಿಗೆ ಮೋಸ ಮಾಡಿದ್ದಾಳೆ ಎನ್ನಲಾದ ಯುವತಿ ವರ್ಷಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ವಾಮೀಜಿ ನೀಡಿದ ದೂರಿನಲ್ಲೇನಿದೆ?
2020ರಲ್ಲಿ ಫೇಸ್ಬುಕ್ನಲ್ಲಿ ವರ್ಷಾ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ, ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಆದ ಬಳಿಕ ಆ ಯುವತಿ ಚಾಟಿಂಗ್ ಮಾಡಲು ಪ್ರಾರಂಭಿಸಿದ್ದಳು.
ಬಳಿಕ ತನಗೆ ಆಧ್ಯಾತ್ಮಿಕವಾಗಿ ಆಸಕ್ತಿ ಇದೆ ಎಂದು ಹೇಳಿ ನನ್ನ ಮೊಬೈಲ್ ನಂಬರ್ ಪಡೆದುಕೊಂಡಳು. ಬಳಿಕ ವಾಟ್ಸ್ಆಪ್ನಲ್ಲಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಹಲವು ಬಾರಿ ವಿಡಿಯೋ ಕರೆ ಕೂಡಾ ಮಾಡಿದ್ದಳು ಎಂದು ಸ್ವಾಮೀಜಿ ದೂರು ನೀಡಿರುವುದಾಗಿ ಮೂಲಗಳು ತಿಳಿಸಿವೆ.
ವಿಡಿಯೋ ಕರೆ ಮಾಡಿದ್ದಾಗ ಯುವತಿ ಇಲ್ಲಿಯವರೆಗೂ ತನ್ನ ಮುಖವನ್ನೂ ತೋರಿಸಿಲ್ಲ. ಕೈ-ಕಾಲು ಮಾತ್ರ ತೋರಿಸಿ ಮಾತನಾಡುತ್ತಿದ್ದಳು. ಅವಳು ಅನಾಥೆ ಎಂದು ಹೇಳಿಕೊಂಡಿದ್ದಳು. ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿರುವುದಾಗಿ ಈ ಯುವತಿ ಹೇಳಿದ್ದು, ₹2 ಲಕ್ಷ ಪಡೆದಿದ್ದಳು. ನಂತರ ತನ್ನ ಹೆಸರಿನಲ್ಲಿ ಜಮೀನು ಇರುವುದಾಗಿ ಅದನ್ನು ಮಠದ ಹೆಸರಿಗೆ ಬರೆಯುವುದಾಗಿ ಯುವತಿ ಹೇಳಿ ಹಂತ ಹಂತವಾಗಿ ಸ್ವಾಮೀಜಿ ಬಳಿಯಿಂದ ಯುವತಿ ಬರೋಬ್ಬರಿ ₹35 ಲಕ್ಷ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ವರ್ಷಾ ಎನ್ನಲಾದ ಯುವತಿ ತನ್ನ ಜಮೀನು ದಾಖಲೆ ತರುವ ವೇಳೆ ತನ್ನ ಮೇಲೆ ಹಲ್ಲೆಯಾಗಿದ್ದು, ಪ್ರಸ್ತುತವಾಗಿ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದೇನೆ ಎಂದು ಹೇಳಿದ್ದಾಳೆ. ಬಳಿಕ ಆಸ್ಪತ್ರೆಯ ಬಿಲ್ ಪಾವತಿಸಲು ಹಣ ಕೇಳಿದ್ದಳು. ಇದರಿಂದ ಆಕೆಯ ಮೇಲೆ ಅನುಮಾನಗೊಂಡು ನನಗೆ ಪರಿಚಯಸ್ಥರೊಬ್ಬರನ್ನು ಆಸ್ಪತ್ರೆಗೆ ವಿಚಾರಿಸಲು ಕಳುಹಿಸಿದೆ. ಅವರು ಆಸ್ಪತ್ರೆಯಲ್ಲಿ ಕೇಳಿದಾಗ ವರ್ಷಾ ಎಂಬುವವರು ಯಾರು ದಾಖಲಾಗಿಲ್ಲ ಎಂದು ತಿಳಿದುಬಂದಿತು.
ಬಳಿಕ ವರ್ಷಾ ಸ್ನೇಹಿತೆ ಎನ್ನಲಾದ ಮಂಜುಳಾ ಅವಳಿಗೆ ಕರೆ ಮಾಡಿದ್ದೆ, ಆ ಸಮಯದಲ್ಲಿ ಅವರು ವರ್ಷಾಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕರೆದುಕೊಂಡು ಬರುವೆ, ಆಸ್ಪತ್ರೆಗೆ ನೀಡಿರುವ ಹಣವನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ, ವರ್ಷಾ ಜತೆಗೆ ಇದ್ದ ಸಲುಗೆಯ ಬಗ್ಗೆ ಎಲ್ಲರಿಗೂ ಹೇಳಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
“ಮೇ 23ರಂದು ಮಂಜುಳಾ ಮತ್ತು ಇತರರು ಮಠಕ್ಕೆ ಹೋಗಿ ಹಣ ನೀಡಬೇಕೆಂದು ಗಲಾಟೆ ಮಾಡಿದ್ದಾರೆ. ಸ್ವಾಮೀಜಿಗೆ ₹55 ಹಣ ಕೊಡುವಂತೆ ಕೇಳಿದ್ದಾರೆ. ಈ ಘಟನೆ ಬಳಿಕ ಸ್ವಾಮೀಜಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“2020ರಲ್ಲಿ ಸ್ವಾಮೀಜಿಯನ್ನು ಯುವತಿ ಪರಿಚಯ ಮಾಡಿಕೊಂಡಿದ್ದಳು. ಸ್ವಾಮೀಜಿ ಬಳಿ ನಾನಾ ಕಾರಣ ಹೇಳಿ ಹಣ ಪಡೆದುಕೊಂಡಿದ್ದಾಳೆ. ಸ್ವಾಮೀಜಿ ಬಳಿ ಹಣ ವರ್ಗಾವಣೆ ಮಾಡಿದ ಎಲ್ಲ ದಾಖಲೆಗಳು ಇವೆ. ಯಾವ ಯಾವ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಪರಿಶೀಲಿಸಲಾಗುತ್ತಿದೆ. ಸ್ವಾಮೀಜಿ ₹50 ಲಕ್ಷದವರೆಗೂ ಹಣ ಕಳೆದುಕೊಂಡಿರುವ ಅನುಮಾನವಿದೆ. ಮಂಜುಳಾ ಹಾಗೂ ಇತರರಿಗೂ ವರ್ಷಾ ಎಂಬ ಯುವತಿಗೂ ಏನು ಸಂಬಂಧ ಎಂಬುದು ತನಿಖೆಯಿಂದ ತಿಳಿಯಬೇಕಿದೆ” ಎಂದಿದ್ದಾರೆ.
“ಸ್ವಾಮೀಜಿಗೆ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಕಡೆಯವನು ಎನ್ನಲಾದ ಒಬ್ಬನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.
ಫೇಸ್ಬುಕ್ ಯುವತಿ ಬಲೆಗೆ ಬಿದ್ದು ₹37 ಲಕ್ಷ ಕಳೆದುಕೊಂಡ ಸ್ವಾಮೀಜಿ
