ಮೈಸೂರು:- ಮೈಸೂರಿನ ಪಡುವಾರಹಳ್ಳಿ ನಿವಾಸಿ ಹಾಗೂ ರೌಡಿ ಶೀಟರ್ ಚಂದ್ರು ಕೊಲೆ ಪ್ರಕರಣ ಸಂಬಂಧ ವಿವಿ ಪುರಂ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಮೈಸೂರು ನಗರದ ಪಡುವಾರಹಳ್ಳಿ, ಕುವೆಂಪುನಗರ ಹಾಗೂ ಕೆ.ಜಿ.ಕೊಪ್ಪಲಿನ ನಿವಾಸಿಗಳಾದ ಯಶವಂತ, ಪ್ರಶಾಂತ, ಅರವಿಂದ ಸಾಗರ್, ರಾಘವೇಂದ್ರ, ಸುದೀಪ್, ಮಹೇಶ್, ಪ್ರೀತಮ್ ಬಂಧಿತರಾಗಿದ್ದು, ಉಳಿದ ನಾಲ್ವರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ.
ಬಂಧಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಹತ್ಯೆಯಲ್ಲಿ 11 ಮಂದಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ನಾಲ್ವರಾದ ವರುಣ್, ಅನಿಲ್, ಸಚಿನ್, ದರ್ಶನ್ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.
ಮೇ 18ರಂದು ವಿವಿ ಪುರಂನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ಕುಳಿತಿದ್ದ ಚಂದ್ರು ಎಂಬಾತನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಇಲವಾಲದ ಹೊರ ವಲಯದ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿಶೀಟರ್ ದೇವು ಕೊಲೆ ಹಿನ್ನಲೆಯಲ್ಲಿ ಚಂದ್ರುವನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ ಎಂದು ಪೊಲಿಸರ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳ ಪತ್ತೆಗಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರು ಎನ್.ಆರ್.ಭಾಗದ ಎಸಿಪಿ ಅಶ್ವತ್ ನಾರಾಯಣ್, ದೇವರಾಜ ವಿಭಾಗ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್ ಹಾಗೂ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಶ್ ಮತ್ತು ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ಪ್ರತೇಕ ತಂಡವನ್ನು ರಚಿಸಿದ್ದರು.
ಪ್ರಜರಣ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮೈಸೂರಿನ ರೌಡಿಶೀಟರ್ ಚಂದ್ರು ಕೊಲೆ: ಆರೋಪಿಗಳ ಬಂಧನ
