ಮೈಸೂರು: ಚಿಕ್ಕಮಗಳೂರಿನಲ್ಲಿ ಪೊಲೀಸರು ಯುವ ವಕೀಲರೊಬ್ಬರ ಮೇಲೆ ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿದ್ದಲ್ಲದೆ, ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರುವಂತೆ ಮೈಸೂರಿನ ವಕೀಲರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಮಂಗಳವಾರವೂ ತಮ್ಮ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಬೀದಿಗಳಿದಿರುವ ವಕೀಲರು ರಾಜ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯಿದೆಗೆ ಅನುಮೋದನೆ ನೀಡುವವರೆಗೂ ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ವಕೀಲರು ಪ್ರತಿಭಟಿಸುತ್ತಿದ್ದು, ರಾಜ್ಯ ಸರ್ಕಾರ ಕೇವಲ ವಕೀಲರ ಸಂರಕ್ಷಣಾ ಕಾಯಿದೆಯನ್ನು ಪ್ರಸ್ತಾವನೆ ಮಾಡಿ ಸುಮ್ಮನಾಗಿದೆ. ಇದು ಸರಿಯಲ್ಲ. ಈ ಕೂಡಲೇ ಮಸೂದೆಯನ್ನು ಅಂಗೀಕರಿಸಿ ಶ್ವೇತಪತ್ರ ಹೊರಡಿಸಬೇಕೆಂದು ವಕೀಲರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ವಕೀಲರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾ ಮಾಡಬೇಕು. ಆಗಸ್ಟ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಮುಖ್ಯಮಂತ್ರಿಯವರು ವಕೀಲರಿಗೆ ಭರವಸೆ ನೀಡಿದಂತೆ ಪ್ರಸಕ್ತ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆಗೆ ಅನಮೋದನೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟ ಸಿದ್ದೇಗೌಡ, ಕಾರ್ಯದರ್ಶಿ ಎಸ್.ಉಮೇಶ್, ಖಜಾಂಚಿ ಎಚ್.ಎಸ್.ಮಹದೇವಸ್ವಾಮಿ, ಜಂಟಿ ಕಾರ್ಯದರ್ಶಿ ಜಿ.ಎಂ.ನಾಗೇಶ್, ಮಹಿಳಾ ಕಾರ್ಯದರ್ಶಿ ಬಿ.ಎಸ್.ಭಾಗ್ಯಮ್ಮ ಅನೇಕರು ಇದ್ದರು.
ವಕೀಲರ ಸಂರಕ್ಷಣಾ ಕಾಯಿದೆ ಅನುಮೋದನೆಗೆ ಮುಂದುವರೆದ ಪ್ರತಿಭಟನೆ
![](https://stateroute.in/wp-content/uploads/no-image.jpg)