ಶಿವಮೊಗ್ಗ: ಆತ ಇನ್ನೂ 8 ವರ್ಷದ ಪೋರ. ತಾನು ಪೊಲೀಸ್ ಅಧಿಕಾರಿಯಾಗಬೇಕು ಎಂಬುದು ಬಾಲಕನ ಕನಸು. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಆತ ಒಂದು ಗಂಟೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ. ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಹೂ ಗುಚ್ಛ ಕೊಟ್ಟು ಬಾಲಕನನ್ನು ಠಾಣೆಗೆ ಸ್ವಾಗತ ಕೋರಿದರು.
ದೊಡ್ಡಪೇಟೆ ಪೊಲೀಸ್ ಠಾಣೆ ಅಪರೂಪದ ಘಟನೆಗೆ ಬುಧವಾರ ಸಾಕ್ಷಿಯಾಯಿತು. 1ನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಆಜಾನ್ ಖಾನ್ ಒಂದು ಗಂಟೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ. ಎಸ್ಪಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಈ ಕ್ಷಣಕ್ಕೆ ಸಾಕ್ಷಿಯಾದರು.
ಆಜಾನ್ ಖಾನ್ ಮೂಲತಃ ಬಾಳೆಹೊನ್ನೂರುನವನು. ಪ್ರಸ್ತುತ ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ. ಈ ಬಾಲಕ ಹೃದಯ ಸಂಬAಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ. ಬಾಲಕನ ಮತ್ತು ಆತನ ಪೋಷಕರ ಕೋರಿಕೆಯಂತೆ ಆಗಸ್ಟ್ 16ರ ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಲಾಯಿತು.
ಬಾಲಕನನ್ನು ಸ್ವಾಗತಿಸಿದ ಎಸ್ಪಿ; 8 ವರ್ಷದ ಬಾಲಕ ಆಜಾನ್ ಖಾನ್ ಪೊಲೀಸ್ ಸಮವಸ್ತçವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ. ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಆತನಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು.
ಆಜಾನ್ ಖಾನ್ ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನ ಹೃದಯ ಸರಿಯಾಗಿ ಬೆಳೆದಿಲ್ಲ. 10 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಮಸ್ಯೆ ಇದಾಗಿದೆ. ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆತನ ಕನಸನ್ನು ಶಿವಮೊಗ್ಗದ ಪೊಲೀಸರು ಸಾಕಾರಗೊಳಿಸಿದರು.
ಬಾಲಕ ಆಜಾನ್ ಖಾನ್ ಗುಣಮುಖವಾಗಲು ಮೂರು ಬಗೆಯ ಆಪರೇಷನ್ ಮಾಡಬೇಕು. ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಬಡವರಾದ ಪೋಷಕರು ಇದನ್ನು ಮಾಡಿಸುವ ಸ್ಥಿತಿಯಲ್ಲಿ ಇಲ್ಲ. ಆತ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಪೋಷಕರು ಶಿವಮೊಗ್ಗ ಪೊಲೀಸರಿಗೆ ತಿಳಿಸಿದ್ದರು.
ಆಜಾನ್ ಖಾನ್ ಪೋಷಕರ ಬಳಿ ಮಾಹಿತಿ ಪಡೆದ ಎಸ್ಪಿ ಮಿಥುನ್ ಕುಮಾರ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗಳ ಕಾಲ ಬಾಲಕ ಪೊಲೀಸ್ ನಿರೀಕ್ಷಕನಾಗಿ ಕೆಲಸ ಮಾಡಲು ಅವಕಾಶ ನೀಡಿದರು. ಬುಧವಾರ ಬಾಲಕ ಪೋಷಕರ ಜೊತೆ ಠಾಣೆಗೆ ಆಗಮಿಸಿದ್ದ.
ಠಾಣೆಯ ಸಿಬ್ಬಂದಿ ಆಜಾನ್ ಖಾನ್ ಸ್ವಾಗತಿಸಿದರು. ಕುರ್ಚಿಯಲ್ಲಿ ಕುಳಿತ ಬಾಲಕನಿಗೆ ಕೆಲಸಗಳು ಹೇಗೆ ನಡೆಯುತ್ತವೆ? ಎಂದು ವಿವರಣೆ ನೀಡಿದರು. ತನ್ನ ಆಸೆಯಂತೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ಬಾಲಕ ಸಹ ಸಂತಸ ವ್ಯಕ್ತಪಡಿಸಿದ, ಪೊಲೀಸರಿಗೆ ಪೋಷಕರು ಧನ್ಯವಾದಗಳನ್ನು ತಿಳಿಸಿದರು.