ರಾಮನಗರ: ಚುನಾವಣೆಗೆ ಮುಂಚೆ ಪುಕ್ಕಟ್ಟೆ ನೀಡುವುದಾಗಿ ಹೇಳಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 16 ತಿಂಗಳ ಹಿಂದೆ 5 ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದು, ಪುಕ್ಕಟ್ಟೆ ಯೋಜನೆಗಳನ್ನು ಜಾರಿಗೆ ತಂದು ಬೀಗಿತು.
ಆದರೆ ಪಂಚ ಗ್ಯಾರಂಟಿ ಜಾರಿಯ ಹಿಂದೆ ಇರುವ ಸಾಧಕ-ಭಾದಕಗಳನ್ನು ಯಾರು ಊಹೆ ಮಾಡದ ಪರಿಣಾಮ ಇಂದು ಸಾರ್ವಜನಿಕರು ಅನುಭವಿಸುವಂತಾಗಿದೆ.
ಸಿದ್ದರಾಮಯ್ಯ ಅವರ ಪಂಚ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಯಾವುದೇ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ರಾಜ್ಯದ ಜನತೆ ನೆಮ್ಮದಿಯಾಗಿ ಪ್ರಯಾಣಿಸಿದ ಒಂದು ಉದಾಹರಣೆ ಇಲ್ಲ ಎಂದರೆ ಅತಿಶಯೋಕ್ತಿ ಆಗದೇ ಇರದು ಇದಕ್ಕೊಂದು ನಿದರ್ಶನವೇ ಈ ವರದಿ..
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯ ರಾಮನಗರ ವಿಭಾಗದ ಕನಕಪುರ ಬಸ್ ಘಟಕದಿಂದ ಕನಕಪುರ-ಆದಿಚುಂಚನಗಿರಿ-ತಿಪಟೂರು ನಡುವೆ ಒಂದು ವಾಹನ ಸಂಚಾರವಿದೆ. ಈ ಬಸ್ ಸಾಮರ್ಥ್ಯ 50+2=52, ಆದರೆ ಈ ಬಸ್ಸಿನಲ್ಲಿ ಕನಕಪುರದಿಂದಲೇ 78 ಮಂದಿ ಪ್ರಯಾಣಿಕರು (ಬಹುತೇಕ ಮಹಿಳಾ ಪ್ರಯಾಣಿಕರೇ..!) ಆದಿಚುಂಚನಗಿರಿಗೆ ಪ್ರಯಾಣ ಬೆಳೆಸಿದರು. ಸದರಿ ಬಸ್ ರಾಮನಗರ, ಮಾಗಡಿ, ಕುಣಿಗಲ್, ಯಡಿಯೂರು ಮಾರ್ಗವಾಗಿ ಚುಂಚನಗಿರಿ ಮೂಲಕ ತಿಪಟೂರುಗೆ ತೆರಳಲಿದೆ. ಈ ವಾಹನದಲ್ಲಿ ಕನಕಪುರ, ರಾಮನಗರ, ಮಾಗಡಿ ಸೇರಿದಂತೆ 107ಕ್ಕೂ ಹೆಚ್ಚು ಪ್ರಯಾಣಿಕರು ಚುಂಚನಗಿರಿಗೆ ಪ್ರಯಾಣ ಬೆಳೆಸಿದ್ದಾರೆ.
ಸಾಮಾನ್ಯವಾಗಿ ಒಂದು ಸಾರಿಗೆ ಬಸ್ಸಿನಲ್ಲಿ 55 ಆಸನವಿದ್ದು, ಅಷ್ಟೇ ಪ್ರಯಾಣಿಕರು ಪ್ರಯಾಣ ಮಾಡಲು ಸಾರಿಗೆ ಇಲಾಖೆಯಲ್ಲಿ ನಿಯಮವಿದೆ.
ಆದರೆ ಈ ಬಸ್ಸಿನಲ್ಲಿ ದುಪ್ಪಟ್ಟು ಜನ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಪ್ರಯಾಣಕ್ಕೂ ಮೊದಲು ಸೀಟಿಗಾಗಿ ಮಹಿಳಾ ಪ್ರಯಾಣಿಕರು ಗುದ್ದಾಟ ನಡೆಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಚಿತ ಪ್ರಯಾಣಕ್ಕೂ ಮೊದಲು ಸೀಟಿಗಾಗಿ ಯಾವುದೇ ಗಲಾಟೆ ಇರಲಿಲ್ಲ. ಈ ಸರ್ಕಾರ ಬರುವ ಮೊದಲು ಈ ಮಾರ್ಗದ ವಾಹನ ಖಾಲಿ ಖಾಲಿಯಾಗಿ ಹೋಗಿ ಬರುತ್ತಿತ್ತು. ಆದರೆ ಈ ಸರ್ಕಾರ ಉಚಿತ ಯೋಜನೆ ಜಾರಿ ಮಾಡಿದ ಮೇಲೆ ಪ್ರಯಾಣಿಕರ ಓಡಾಟ ಜಾಸ್ತಿಯಾಗಿದೆ. ಬಸ್ ಸೌಲಭ್ಯ ಒದಗಿಸದೇ ಉಚಿತ ಪ್ರಯಾಣ ಘೋಷಿಸಿದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪುಕ್ಕಟ್ಟೆ ಪ್ರಯಾಣ ಸೌಲಭ್ಯ ಪಡೆದ ಮಹಿಳಾ ಪ್ರಯಾಣಿಕರೇ ಹಿಡಿಶಾಪ ಹಾಕುತ್ತ.. ಇರುವುದೊಂದೆ ಬಸ್ಸು, ಹೇಗಾದರೂ ಮಾಡಿ ಪ್ರಯಾಣ ಮಾಡೋಣ ಎಂದು ಗೊಣಗುತ್ತಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಿದ್ದಾರೆ..