ವರದಿ : ಸುಚಿತ್ರ ಗೌಡ
ಸಕಲೇಶಪುರ : ಬಾಕಿ ಕೊಡಬೇಕಿದ್ದ ಹಣ ನೀಡದಿದ್ದಕ್ಕೆ ಲಾರಿಗೆ ಜಲ್ಲಿ ಲೋಡ್ ಮಾಡಲು ನಿರಾಕರಣೆ. ಕ್ರಷರ್ ಮ್ಯಾನೇಜರ್ ಹಾಗೂ ಕಾರ್ಮಿಕರ ಮೇಲೆ ಹಲ್ಲೆ, ಕಾರನ್ನು ಚೇಸ್ ಮಾಡಿ ಕಾರಿನ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು.
ಬಾಕಿ ಕೊಡಬೇಕಿದ್ದ ಹಣ ನೀಡದ ಕಾರಣ ಲಾರಿಗೆ ಜಲ್ಲಿ ಲೋಡ್ ಮಾಡಲು ನಿರಾಕರಿಸಿದ್ದಕ್ಕೆ ಕ್ರಷರ್ ಮ್ಯಾನೇಜರ್ ಹಾಗೂ ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಕಾರನ್ನು ಜಖಂಗೊಳಿಸಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೊಸಗದ್ದೆ ಗ್ರಾಮದಲ್ಲಿ ನಡೆದಿದೆ. ಅರುಣ್ ಎಂಬುವವರು ಜಲ್ಲಿ ಕ್ರಶರ್ ನಡೆಸುತ್ತಿದ್ದು, ಅನಿಲ್ ಎಂಬುವವರು ಕ್ರಷರ್ನಿಂದ ಜಲ್ಲಿ ತೆಗೆದುಕೊಂಡು ಹೋಗಿದ್ದು, ನಾಲ್ಕುವರೆ ಲಕ್ಷ ರೂ ಬಾಕಿ ಹಣ ಕೊಡಬೇಕಿತ್ತು. ಬಾಕಿಯಿರುವ ಹಣ ನೀಡುವಂತೆ ಅರುಣ್ ಪತ್ನಿ ಭೂಮಿಕಾ ಅನಿಲ್ಗೆ ಫೋನ್ ಮಾಡಿದ್ದರು. ಕೂಡಲೇ ಒಂದು ಲಕ್ಷ ಹಣ ನೀಡಿ ಬಾಕಿ ಹಣವನ್ನು ಶೀಘ್ರದಲ್ಲೇ ಕೊಡುತ್ತೇನೆ ಎಂದು ಅನಿಲ್ ಹೇಳಿದ್ದರು.
ಇಲ್ಲಾ ಮಳೆಗಾಲ ಶುರುವಾಗುತ್ತಿದೆ ಕ್ರಷರ್ ಕೆಲಸ ನಿಲ್ಲಿಸುತ್ತೇವೆ ಬಾಕಿಯಿರುವ ಹಣ ಕೊಟ್ಟರೆ ಮಾತ್ರ ಜಲ್ಲಿ ನೀಡುತ್ತೇವೆ ಎಂದು ಭೂಮಿಕಾ ಹೇಳಿದ್ದರು. ಆದರೂ ಅನಿಲ್ ತನ್ನ ಜಲ್ಲಿ ಲೋಡ್ ಮಾಡಿಸಿಕೊಂಡು ಬರುವಂತೆ ತನ್ನ ಸಹೋದರ ಜಿತೇಂದ್ರ ಹಾಗೂ ಶಫಿಕ್ ಎಂಬುವವರನ್ನು ಕಳುಹಿಸಿದ್ದ.
ಜಿತೇಂದ್ರ ಕ್ರಷರ್ಗೆ ಬಂದ ವೇಳೆ ಬೇರೆ ಲಾರಿಗೆ ಜಲ್ಲಿ ಲೋಡ್ ಮಾಡಲಾಗುತ್ತಿತ್ತು. ಇದನ್ನು ಕಂಡ ಜಿತೇಂದ್ರ ನಮ್ಮ ಲಾರಿಗೆ ಜಲ್ಲಿ ಲೋಡ್ ಮಾಡಿ ಎಂದಿದ್ದಾನೆ. ನೀವು ಬಾಕಿ ಉಳಿಸಿಕೊಂಡಿರುವ ಹಣ ಕೊಟ್ಟಿಲ್ಲ ನಿಮಗೆ ಜಲ್ಲಿ ಕೊಡಬೇಡಿ ಎಂದು ಮಾಲೀಕರು ಹೇಳಿದ್ದಾರೆ. ಅವರಿಗೆ ಫೋನ್ ಮಾಡಿ ಎಂದಿದ್ದಾರೆ. ಇದರಿಂದ ಕೋಪಗೊಂಡ ಜಿತೇಂದ್ರ ಜಲ್ಲಿ ತುಂಬದಿದ್ದರೆ ನಿಮ್ಮನ್ನು ಸೇರಿ ಲೋಡ್ ಮಾಡುತ್ತಿರುವ ಲಾರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ.
ಆದರೂ ಜಲ್ಲಿ ಲೋಡ್ ಮಾಡದಿದ್ದಾಗ ಹತ್ತರಿಂದ ಹದಿನೈದು ಹುಡುಗರನ್ನು ಕ್ರಷರ್ಗೆ ಕರೆಸಿಕೊಂಡ ಜಿತೇಂದ್ರ ಕ್ರಷರ್ ಮ್ಯಾನೇಜರ್ ಜರೀನ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಕಾರಿನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಜರೀನ್ ಹೊರಟಿದ್ದು, ಕಾರನ್ನು ಚೇಸ್ ಮಾಡಿದ ದುಷ್ಕರ್ಮಿಗಳು ಬಾಳ್ಳುಪೇಟೆಯಲ್ಲಿ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಘಟನಾ ಸ್ಥಳದಲ್ಲಿ ಕೆಲವರು ಪುಂಡರನ್ನು ತಡೆದು ಪ್ರಶ್ನಿಸಿದ್ದಾರೆ. ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಸಬೂಬು ಹೇಳಿದ್ದಾರೆ. ಜರೀನ್ ಅಷ್ಟರಲ್ಲಾಗಲೇ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದು ಪುನಃ ಸಕಲೇಶಪುರ ಪಟ್ಟಣದಲ್ಲಿ ಕಾರನ್ನು ಅಡ್ಡಗಟ್ಟಿ ಗಾಜನ್ನು ಪುಡಿ ಮಾಡಿ ಜರೀನ್ ಹಾಗೂ ಜೊತೆಯಲ್ಲಿದ್ದ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾರೆ.
ಗಾಯಾಳುಗಳು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ .