ಮೈಸೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಭರಪೂರ ಯೋಜನೆ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಆಗಿದೆ.
ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಚಿತ್ರನಗರಿ ಎಲ್ಲಿ ಮಾಡಬೇಕೆಂಬ ಗೊಂದಲಕ್ಕೆ ತೆರೆ ಬಿದ್ದಿದ್ದು, ಖಾಸಗಿ ಸಹಭಾಗಿತ್ವದಲ್ಲೇ ಮೈಸೂರಿನಲ್ಲೇ ನಿರ್ಮಾಣ ಮಾಡಲು ಅಸ್ತು ಎನ್ನಲಾಗಿದೆ.
ಮೈಸೂರಲ್ಲಿ ಚಿತ್ರನಗರಿ ಸ್ಥಾಪನೆ ಮಾಡಬೇಕೆಂಬ ರೆಬಲ್ ಸ್ಟಾರ್ ದಿ.ಅಂಬರೀಶ್ ಅವರ ಕನಸಾಗಿತ್ತು. ಅದರಂತೆ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುವುದೆಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಆದರೆ, ನಂತರ ಬಂದ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ ಚಿತ್ರನಗರಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಕಳೆದ ಬಾರಿಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರನಗರಿಯನ್ನು ಬೆಂಗಳೂರಿನಲ್ಲಿ ಮಾಡಲು ಆಲೋಚನೆ ಮಾಡಲಾಗಿತ್ತು.
ಹಾಗೇ ನೋಡಿದರೆ ಈ ಬಾರಿಯ ಬಜೆಟ್ನಲ್ಲಿ ಚಿತ್ರನಗರಿ ಗೊಂದಲ ನಿವಾರಣೆಯಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡಲಾಗುವುದೆಂದು ಸಿಎಂ ಘೋಷಿಸಿದ್ದಾರೆ. ಇದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೂ ಬೂಸ್ಟ್ ಸಿಗಲಿದೆ. ಚಿತ್ರನಗರಿ ಸ್ಥಾಪನೆಯಾದರೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳಿಗೆ ಬೇಡಿಕೆ ಉಂಟಾಗುತ್ತದೆ.
ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ
ಎರಡು ದಶಕಗಳಿಂದಲೂ ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕೆಂಬ ಕೂಗು ಕೇಳಿ ಬರುತ್ತಲೇ ಇತ್ತು. ಆದರೆ, ಅದು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಈ ಬಾರಿ ಬಜೆಟ್ನಲ್ಲಿ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕಮರ್ಶಿಯಲ್ ಚಟುವಟಿಕೆಯಿಂದ ಬೆಟ್ಟ ದಿನೇದಿನೇ ತನ್ನ ಸತ್ವ ಕಳೆದುಕೊಳ್ಳುತ್ತಿತ್ತುಘಿ. ಇದೀಗ ಬೆಟ್ಟ ಉಳಿಸಲು ಪ್ರಾಧಿಕಾರ ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಪಾರಂಪರಿಕ ಕಟ್ಟಡಗಳಿಗಿಲ್ಲ ಅನುದಾನ
ಮೈಸೂರು ಸಾಂಸ್ಕೃತಿಕ ನಗರಿ ಹೇಗೋ ಪಾರಂಪರಿಕ ನಗರಿ ಕೂಡ ಹೌದು. ಮೈಸೂರು ನಗರದಲ್ಲಿ ಸರ್ಕಾರ ಅಧಿಕೃತವಾಗಿ ಘೋಷಿಸಿರುವ 132 ಪಾರಂಪರಿಕ ಕಟ್ಟಡಗಳಿಗೆ. ಆದರೆ, ಅದರ ನಿರ್ವಹಣೆ ಇಲ್ಲಘಿ. ಇದರಿಂದ ಎಷ್ಟೋ ಕಟ್ಟಡಗಳು ಕುಸಿದು ಬೀಳುತ್ತಿದೆ. ಕಳೆದ ಬಾರಿ ವಿಶೇಷ ಅನುದಾನ ಸಿಗುವ ನಿರೀಕ್ಷೆ ಇತ್ತುಘಿ. ಆದರೆ, ಈ ಬಾರಿಯೂ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಯಾವುದೇ ಅನುದಾನ ಘೋಷಣೆ ಆಗದೆ ಇರುವುದು ನಿರಾಸೆ ಮೂಡಿಸಿದೆ.