ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಅವ್ಯವಹಾರ ನಡೆಸಿ ಹಣ ಮತ್ತು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರ ವಿರುದ್ಧ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಗುರುಕುಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಜಿ.ನಂಜಪ್ಪಸ್ವಾಮಿ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ೨೦೧೧ರಲ್ಲಿ ಪ್ರಾರಂಭಗೊಂಡ ಈ ಸಂಘದ ಅಧ್ಯಕ್ಷರಾದ ಎಂ.ಎಸ್.ಮಹದೇವಸ್ವಾಮಿ ೮ ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಸಂಪತ್ತನ್ನು ಮಾಡಿದ್ದಾರೆಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಇವರು ಸಂಘದ ಹೆಸರಿನಲ್ಲಿ ೨೦೧೩ರಿಂದ ಈವರೆಗೂ ಸಂಘದ ಹಿರಿಯ ಸದಸ್ಯರಾದ ೭೦ ಮಂದಿಗೆ ಯಾವುದೇ ನಿವೇಶನವನ್ನು ಹಂಚಿಕೆ ಮಾಡಿಲ್ಲ. ಬದಲಿಗೆ ಅವರ ಸಂಬಂಧಿಕರಿಗೆ ಹಾಗೂ ಒಂದೇ ಕುಟುಂಬಕ್ಕೆ ಅನೇಕ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲ್.ರಂಜಿತ ಇವರ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಈ ಸಂಬಂಧ ನೊಂದ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದರು.
ಈ ಅವ್ಯವಹಾರದಲ್ಲಿ ನಮ್ಮ ಹಣ ಬಳಕೆಯಾಗಿದ್ದು, ತಕ್ಷಣ ಸಹಕಾರ ಇಲಾಖೆ ಸಹಕಾರ ಸಚಿವರು ಈ ಬಗ್ಗೆ ಗಮನಹರಿಸಿ ನೊಂದ ಸದಸ್ಯರಿಗೆ ನಿವೇಶನವನ್ನು ಕೊಡಿಸಿಕೊಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಕುಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆ ಡಾ.ಜಿ.ವಿ.ಭಾರತಿ, ಖಜಾಂಚಿ ಎಂ.ಬಸವಣ್ಣ, ಶ್ವೇತಾ ಮಡಪ್ಪಾಡಿ ಗೋಷ್ಠಿಯಲ್ಲಿದ್ದರು.