ಸರಗೂರು: ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮಗಳಲ್ಲಿ ನಡೆಯುವ ಆರೋಗ್ಯ ಶಿಬಿರಗಳನ್ನು ಸದುಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜೀವಿಕ ಸಂಸ್ಥೆಯ ಜಿಲ್ಲಾ ಸಂಚಾಲಕ ಬಸವರಾಜು ಹೇಳಿದರು.
ಸರಗೂರು ತಾಲ್ಲೂಕು ಪಂಚಾಯತಿ, ಆರೋಗ್ಯ ಇಲಾಖೆ, ಜೀವಿಕ ಸಂಸ್ಥೆ ಮತ್ತು ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ತಾಲ್ಲೂಕಿನ ಹಂಚೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಸಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜೀತವಿಮುಕ್ತರ ಆರೋಗ್ಯ ತಪಾಸಣಾ ಶಿಬಿರಗೆ ಚಾಲನೆ ನೀಡಿ ಮಾತನಾಡಿದರು.
ಜೀತವಿಮುಕ್ತರು ಹಾಗೂ ಗ್ರಾಮದ ಎಲ್ಲಾ ಜನರಿಗೂ ಆರೋಗ್ಯ ತಪಾಸಣೆ ನಡೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದ್ದು, ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು, ಏಕೆಂದರೆ ಇಂದಿನ ಕಾಲದಲ್ಲಿ ತುಂಬಾ ಖಾಯಿಲೆಗಳು ನಮಗೆ ಗೊತ್ತಿಲ್ಲದೆ ನಮ್ಮ ದೇಹ ಸೇರುತ್ತಿವೆ. ಕೊರೋನಾ ಎಂಬ ಮಹಾಮಾರಿ ಜನಜೀವನವನ್ನು ಹೇಗೆ ಅಸ್ತವ್ಯಸ್ತ ಮಾಡಿದೆ ಎಂಬುದು ತಿಳಿದಿದೆ. ಅದಕ್ಕೋಸ್ಕರ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಆಯೋಜಿಸಿದಾಗ ಅದರ ಉಪಯೋಗ ಪಡೆದೊಕೊಳ್ಳಿ ಎಂದು ಹೇಳಿದರು.
ಗ್ರಾಮ ಪಂಚಾಯತಿಗಳಿಂದ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸಲಾಗಿದೆ, ಆದರೂ ಶೌಚಾಲಯ ಬಳಸುತ್ತಿಲ್ಲ, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಹೆಚ್ಚುತ್ತದೆ. ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಬಳಸಿ ಎಂದು ಕಿವಿ ಮಾತು ಹೇಳಿದರು.
ಶಿಬಿರದಲ್ಲಿ ಹಂಚೀಪುರ, ಬಿದರಹಳ್ಳಿ, ಇಟ್ನಾ, ಹೆಗ್ಗನೂರು, ಸಾಗರೆ, ಮನುಗನಹಳ್ಳಿ ಮತ್ತು ಕೊತ್ತೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೀತವಿಮುಕ್ತರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಸುಷ್ಮಾ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಜೀತವಿಮುಕ್ತರಿಗೆ ಆರೋಗ್ಯ ತಪಾಸಣೆ
